ಪ್ರಪಂಚಕ್ಕೆ ಭಾರತ ದೇಶವು ನೀಡಿದ ಅತ್ಯದ್ಭುತ ಕೊಡುಗೆಯೇ ಯೋಗ

Samagraphrabha
4 Min Read

ಜೂನ್ 21 ರಂದು ಅಂತರಾಷ್ಟ್ರೀಯ ಯೋಗ ದಿನಾಚರಣೆ ನಿಮಿತ್ತ ವಿಶೇಷ ಲೇಖನ

ಜಗತ್ತಿಗೆ ಭಾರತ ದೇಶವು ನೀಡಿದ ಅತ್ಯದ್ಭುತ ಕೊಡುಗೆಯೆಂದರೆ “ಯೋಗ “ ವಾಗಿದೆ. ಯೋಗವು ಪ್ರಾಚೀನ ಭಾರತೀಯ ತತ್ವ ಶಾಸ್ತ್ರವಾಗಿದ್ದು ಸಾವಿರಾರು ವರ್ಷಗಳ ಹಿಂದಿನ ಇತಿಹಾಸ ಹೊಂದಿದೆ. ಯೋಗವು ಮನುಷ್ಯನ ದೈಹಿಕ, ಮಾನಸಿಕ ಹಾಗೂ ಆಧ್ಯಾತ್ಮಿಕ ಆರೋಗ್ಯದ ಸರಳ ಸೂತ್ರವಾಗಿದೆ. ಇಡೀ ಮನುಷ್ಯ ಜನಾಂಗದ ಏಳಿಗೆಗೆ , ಸಂತೋಷಕ್ಕೆ, ನೆಮ್ಮದಿಗೆ ತೃಪ್ತಿಗೆ ಬೇಕಾಗುವ ಬಹುದೊಡ್ಡ ಸಾಧನವೇ ಯೋಗವಿದ್ಯೆಯಾಗಿದೆ. ಭಾರತ ದೇಶ ಅಷ್ಟೇ ಅಲ್ಲದೇ ಇನ್ನೂ ಹಲವಾರು ದೇಶಗಳಲ್ಲಿ ಯೋಗವು ತನ್ನ ಛಾಪನ್ನು ಮೂಡಿಸಿದೆ.

ಯೋಗ ಸೂತ್ರಗಳನ್ನು ರಚಿಸಿದಂತಹ ಪತಂಜಲಿ ಮಹರ್ಷಿಗಳನ್ನು ಯೋಗದ ಪಿತಾಮಹ ಎಂದು ಪರಿಗಣಿಸಲಾಗುತ್ತದೆ.

ಯೋಗೇನಚಿತ್ತಸ್ಯ ಪದೇವವಾಚಾಂ
ಮಲಂ ಶರೀರಸ್ಯ ಚ ವೈದ್ಯಕೇನಾಂ
ಯೋಪಾಕರೋತ್ತಂ ಪ್ರವರಂ ಮುನೀನಾಂ
ಪತಂಜಲಿ ಪ್ರಾಂಜಲಿಂ ರಾನತೋಸ್ಮಿನ್

- Advertisement -
Ad image

ಯೋಗದಿಂದ ಮನಸ್ಸಿನ ಕಲ್ಮಶಗಳನ್ನು , ಪದಗಳಿಂದ ಭಾಷೆಯ ದೋಷಗಳನ್ನು ಮತ್ತು ವೈದ್ಯಕೀಯದಿಂದ ಶರೀರದ ದೋಷಗಳನ್ನು ನಿವಾರಿಸಿದ ಶ್ರೇಷ್ಠ ಮುನಿ ಪತಂಜಲಿಯವರಿಗೆ ನನ್ನ ನಮಸ್ಕಾರಗಳು ಎಂದು ಪತಂಜಲಿ ಮಹರ್ಷಿಗಳಿಗೆ ಕೃತಜ್ಞತೆ ಸಲ್ಲಿಸಲಾಗುತ್ತದೆ.

‘ಯೋಗ’ ಎಂಬ ಶಬ್ದವು ಸಂಸ್ಕೃತ ಬಾಷೆಯ ‘ಯುಜ್ ‘ ಎಂಬ ಪದದಿಂದ ಆಗಿದೆ. ಯೋಗವೆಂದರೆ ‘ಜೋಡಿಸು’ ‘ಸೇರಿಸು’ ‘ಕೂಡಿಸು’ ಎಂಬ ಆರ್ಥ ಬರುತ್ತದೆ. ಆಧ್ಯಾತ್ಮಿಕ, ಮಾನಸಿಕ ಮತ್ತು ದೈಹಿಕ ಶಾಂತಿ-ಸಂಯಮಗಳನ್ನು ಕಾಯ್ದುಕೊಳ್ಳಲು ಸಾಧಿಸಲಾಗುವ ಉನ್ನತ ಜೀವನ ಶಿಕ್ಷಣವೇ ಯೋಗವಾಗಿದೆ. ಯೋಗದಲ್ಲಿ ದೇಹದ ಜೊತೆ ಮನಸ್ಸು, ಬುದ್ಧಿ ಭಾವನೆ ಹಾಗೂ ಆತ್ಮವನ್ನು ಕೂಡಿಸುವುದನ್ನು ಅಭ್ಯಾಸ ಮಾಡಲಾಗುತ್ತದೆ.

ಯೋಗವು ವ್ಯಕ್ತಿಯಲ್ಲಿನ ಶಕ್ತಿಯನ್ನು ವೃದ್ಧಿಪಡಿಸಲು ಒಂದು ವಿಧಾನವಾಗಿದೆ. ಅದು ಸಂಪೂರ್ಣ ಸ್ವ ಸಾಫಲ್ಯ ಪಡೆಯುವ ಒಂದು ಹಾದಿಯನ್ನು ಒದಗಿಸುತ್ತದೆ. ಮಾನವನ ಪ್ರಜ್ಞೆಯ ಆತ್ಮಶಕ್ತಿಯ ಅಭಿವೃದ್ಧಿಯಲ್ಲಿ ಯೋಗವು ವಿಕಾಸವಾಗುತ್ತಿರುವ ಪ್ರಕ್ರಿಯೆಯಾಗಿದೆ.

ಯೋಗದ ದೃಷ್ಟಿಯಲ್ಲಿ ದೇಹವು ಐದು ಕೋಶಗಳನ್ನು ಒಳಗೊಂಡಿದೆ. ಈ ಐದು ಕೋಶಗಳು ಅನ್ನಮಯ ಕೋಶ, ಪ್ರಾಣಮಯ ಕೋಶ, ಮನೋಮಯ ಕೋಶ, ವಿಜ್ಞಾನಮಯ ಕೋಶ ಮತ್ತು ಆನಂದಮಯ ಕೋಶ.

ಯೋಗದ ವಿಧಗಳು: ಜಪ ಯೋಗ, ಕರ್ಮ ಯೋಗ, ಜ್ಞಾನ ಯೋಗ, ಭಕ್ತಿ ಯೋಗ, ರಾಜ ಯೋಗಗಳಾಗಿವೆ.

ಜಪ ಯೋಗ,: ವ್ಯಕ್ತಿಯ ಮನಸ್ಸನ್ನು ನೆನಪಿನಿಂದ ಅಥವ ಪುನರುಕ್ತಿಯ ಮೂಲಕ ದೇವರ ನಾಮಗಳನ್ನು ಮತ್ತು ಮಂತ್ರಗಳನ್ನು ಕೇಂದ್ರೀಕರಿಸುವುದು.

ಕರ್ಮಯೋಗ : ತಾವು ಮಾಡುವ ಕರ್ಮದ ಫಲಾಪೇಕ್ಷೆಯಿಲ್ಲದೇ ಕೆಲಸ ಮಾಡುವುದನ್ನು ಕಲಿಸುತ್ತದೆ. ಈ ಸಾಧನೆಯಲ್ಲಿ ಯೋಗಿಯು ತನ್ನ ಕರ್ತವ್ಯವನ್ನು ದೈವೀಕವೆಂದು ಪರಿಗಣಿಸುತ್ತಾನೆ. ತುಂಬು ಹೃದಯದ ಮನೋಭಾವದೊಂದಿಗೆ ನಡೆಸುತ್ತಾನೆ.
ಜ್ಞಾನ ಯೋಗ : ಧ್ಯಾನದ ಮೂಲಕ ಆಧ್ಯಾತ್ಮಿಕ ವ್ಯಕ್ತಿತ್ವವನ್ನು ಅರಿತುಕೊಳ್ಳುವುದು. ವೇದಪುರಾಣಗಳ ಅಧ್ಯಯನ.
ಭಕ್ತಿ ಯೋಗ: ದೈವಿಕ ಶಕ್ತಿಗೆ ತನ್ನನ್ನು ತಾನು ಸಮರ್ಪಿಸಿಕೊಳ್ಳುವುದು.

ರಾಜ ಯೋಗ : ಅಷ್ಟಾಂಗ ಯೋಗವೆಂದೇ ಪ್ರಸಿದ್ಧಿ ಬಂದಿರುವ ರಾಜ್ ಯೋಗವು ಮಾನವ ಜೀವಿಯ ಸರ್ವತೋಮುಖ ಅಭಿವೃದ್ಧಿಗಾಗಿಯೇ ಇದೆ. ಇವುಗಳೆಂದರೆ ಯಮ, ನಿಯಾಮ, ಆಸನ, ಪ್ರಾಣಾಯಾಮ, ಪ್ರತ್ಯಾಹಾರ, ಧಾರಣ, ಧ್ಯಾನ, ಸಮಾಧಿ.

ಯಮ: ಯಮಗಳು ನೈತಿಕ ಸಂಹಿತೆಯ ನಿಯಮಗಳಾಗಿವೆ. ಇವು ಅಹಿಂಸೆ, ಸತ್ಯ, ಆಸ್ತೇಯ ( ಕಳ್ಳತನ ಮಾಡದಿರುವುದು ) , ಬ್ರಹ್ಮಚರ್ಯ, ಅಪರಿಗ್ರಹ ( ದುರಾಸೆಯಿಲ್ಲದಿರುವುದು) ಒಳಗೊಂಡಿವೆ.

ನಿಯಮ : ನಿಯಮಗಳು ವೈಯಕ್ತಿಕ ನಡುವಳಿಕೆಯ ನಿಯಮಗಳಾಗಿವೆ. ಇವು ಶುದ್ಧತೆ, ಸಂತೋಷ, ತಪಸ್ಸು, ಆಧ್ಯಾತ್ಮಿಕ ಅಧ್ಯಯನ , ಪ್ರಣಿಧಾನ ( ದೇವರ ಮೇಲಿನ ನಿರಂತರ ಭಕ್ತಿ) ಒಳಗೊಂಡಿವೆ.

ಆಸನ: ಆಸನವು ಯೋಗ ಭಂಗಿಗಳನ್ನು ಸೂಚಿಸುತ್ತದೆ. ಇದು ದೇಹವನ್ನು ಧ್ಯಾನಕ್ಕೆ ಸ್ಥಿರವಾಗಿಸಲು ಕುಳಿತುಕೊಳ್ಳಲು ಸಹಾಯ ಮಾಡುತ್ತದೆ.

ಪ್ರಾಣಾಯಾಮ: ಪ್ರಾಣಾಯಾಮವು ಉಸಿರಾಟದ ಮೂಲಕ ಶಕ್ತಿಯ ನಿಯಂತ್ರಣ, ಶಕ್ತಿಯ ವಿಸ್ತರಣೆ ಮತ್ತು ಉಸಿರಾಟದ ವಿಸ್ತರಣೆಯನ್ನು ಸೂಚಿಸುತ್ತದೆ.

ಪ್ರತ್ಯಾಹಾರ: ಇದು ನಮ್ಮ ಇಂದ್ರಿಯಗಳ ಮೇಲೆ ನಿಯಂತ್ರಣ ಬೆಳೆಸುವುದು ಆಗಿದೆ. ಇದು ಇಂದ್ರಿಯಗಳನ್ನು ಬಾಹ್ಯದಿಂದ ಆಂತರಿಕ ಹರಿವಿಗೆ ಮರುನಿರ್ದೇಶಿಸುವುದನ್ನು ಒಳಗೊಂಡಿರುತ್ತದೆ.

ಧಾರಣ: ಇದು ದೃಢತೆ, ತಾಳ್ಮೆ ಮತ್ತು ಜ್ಞಾಪಕ ಶಕ್ತಿಯನ್ನು ಸೂಚಿಸುತ್ತದೆ.

ಧ್ಯಾನ : ಇದು ವ್ಯಕ್ತಿಯ ಮನಸ್ಸಿನ ತರಬೇತಿ ಅಥವಾ ಅರಿವಿನ ಒಂದು ಕ್ರಮವನ್ನುಂಟು ಮಾಡುವ ಆಚರಣೆ ಸೂಚಿಸುತ್ತದೆ.

ಸಮಾಧಿ ಎಂದರೆ ದೈವಿಕತೆಯೊಂದಿಗೆ ವಿಲೀನವಾಗುವುದು ಆಗಿದೆ.

ದೈಹಿಕ, ಮಾನಸಿಕ, ಸಾಮಾಜಿಕ ಮತ್ತು ಆಧ್ಯಾತ್ಮಿಕ ಆರೋಗ್ಯ ಒಳಗೊಂಡಿರುವ ಅಭ್ಯಾಸದ ವಿಧಾನವೆಂದರೆ ದೈನಂದಿನ ಜೀವನದಲ್ಲಿ ಯೋಗವನ್ನು ಅಳವಡಿಸಿಕೊಳ್ಳುವುದಾಗಿದೆ. ಯೋಗವು ನಮ್ಮ ದೇಹ ಹಾಗೂ ಮನಸ್ಸಿಗೆ ಸಂತೋಷ-ಶಕ್ತಿಯನ್ನು ನೀಡುತ್ತದೆ.

ಪ್ರತಿನಿತ್ಯ ಯೋಗಾಭ್ಯಾಸ ಮಾಡುವುದರಿಂದ ಅನೇಕ ಪ್ರಯೋಜನಗಳಿವೆ.

ಪ್ರತಿದಿನ ಯೋಗ ಮಾಡುವುದರಿಂದ ದೇಹ ಮತ್ತು ಮನಸ್ಸಿಗೆ ವಿಶ್ರಾಂತಿ ನೀಡಲು ಸಹಾಯ ಮಾಡುತ್ತದೆ. ದೀರ್ಘಕಾಲದ ಒತ್ತಡದ ದೈಹಿಕ ಲಕ್ಷಣಗಳನ್ನು ಕಡಿಮೆ ಮಾಡಲು ಸಹಕಾರಿಯಾಗುತ್ತದೆ. ಯೋಗವು ಶಕ್ತಿ ಮತ್ತು ಚಲನೆಯ ವ್ಯಾಪ್ತಿಯನ್ನು ಹೆಚ್ಚಿಸುತ್ತದೆ. ನಿದ್ರಾಹೀನತೆಯಿಂದ ಬಳಲುತ್ತಿರುವವರು ರಾತ್ರಿ ಉತ್ತಮ ನಿದ್ರೆ ಮಾಡಬಹುದು. ಆತಂಕ ಮತ್ತು ಖಿನ್ನತೆ ನಿವಾರಣೆ ಮಾಡುತ್ತದೆ. ನಿಯಮಿತವಾದ ಯೋಗಾಭ್ಯಾಸ ತೂಕ ಇಳಿಕೆ ಮಾಡಲು ಸಹಾಯಮಾಡುತ್ತದೆ. ಬೆನ್ನು ನೋವಿನ ಸಮಸ್ಯೆ ನಿವಾರಣೆಗೆ, ರಕ್ತದೊತ್ತಡ ಕಡಿಮೆ ಮಾಡಲು, ಮೆದುಳಿನ ಶಕ್ತಿ ಹೆಚ್ಚಿಸಲು, ರೋಗ ನಿರೋಧಕ ಶಕ್ತಿ ಹೆಚ್ಚಿಸಲು, ಸಂಧಿವಾತ ಪರಿಹರಿಸಲು ಹೀಗೆ ಅನೇಕ ಪ್ರಯೋಜನಗಳನ್ನು ಯೋಗಾಭ್ಯಾಸದಿಂದ ಪಡೆಯಬಹುದಾಗಿದೆ. ಸರಿಯಾದ ಮಾರ್ಗದರ್ಶಕರ ಮೂಲಕ ಯೋಗಾಭ್ಯಾಸ ಮಾಡಿದಲ್ಲಿ ಉತ್ತಮ ಫಲಿತಾಂಶ ಪಡೆಯುವುದರಲ್ಲಿ ಸಂದೇಹವಿಲ್ಲ.

ಲೇಖಕರು: ಶ್ರೀಮತಿ ಅಂಜನಾ ರಾಘವೇಂದ್ರ ಕುಬೇರ
– ವಾರ್ತಾ ಮತ್ತು ಸಾ.ಸಂ. ಇಲಾಖೆ, ಗದಗ

Share this Article