ಸಂಕಷ್ಟದಲ್ಲಿರೋ ರೈತರಿಗೆ ವಿಶೇಷ ಪ್ಯಾಕೇಜ್ ಕೊಡಿ: ಮಾಜಿ ಸಚಿವ ಶಂಕರ ಪಾಟೀಲಮುನೇನಕೊಪ್ಪ ಆಗ್ರಹ

Samagraphrabha
1 Min Read

ನವಲಗುಂದ: ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದ ರೈತನಿಗೆ ತೀವ್ರ ತೊಂದರೆಯಾಗಿದೆ. ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದ್ದು, ಈ ಸಮಯದಲ್ಲಿ ನೊಂದ ರೈತರಿಗೆ ಪರಿಹಾರ ನೀಡುವ ಮೂಲಕ ರಾಜ್ಯ ಸರಕಾರ ರೈತನ ಬೆನ್ನಿಗೆ ನಿಲ್ಲಬೇಕು ಎಂದು ಮಾಜಿ ಸಚಿವ ಶಂಕರ ಪಾಟೀಲಮುನೇನಕೊಪ್ಪ ಅವರು ಆಗ್ರಹಿಸಿದ್ದಾರೆ.

ನವಲಗುಂದ ವಿಧಾನಸಭಾ ಕ್ಷೇತ್ರವೂ ಸೇರಿದಂತೆ ಜಿಲ್ಲೆಯಾಧ್ಯಂತ ನಿರಂತರವಾಗಿ ಮಳೆ ಸುರಿದ ಪರಿಣಾಮ ರೈತರು ಬೆಳೆದ ಬೆಳೆ ಹಾಳಾಗಿದೆ. ಬರಬೇಕಾದ ಫಸಲು ಸರಿಯಾಗಿ ಬರುತ್ತಿಲ್ಲ. ಇದೇ ಸಮಯದಲ್ಲಿ ಮನೆಗಳು ಕೂಡಾ ಮಳೆಗೆ ಹಾನಿಯಾಗಿವೆ. ಇದೇಲ್ಲ ಗೊತ್ತಿದ್ದರೂ ಸರಕಾರ ಕಣ್ಣು ಮುಚ್ಚಿ ಕುಳಿತಿದೆ ಎಂದಿದ್ದಾರೆ.

ಭಾರತೀಯ ಜನತಾ ಪಕ್ಷ ಅಧಿಕಾರದಲ್ಲಿದ್ದ ಸಮಯದಲ್ಲಿ ಮನೆ ಕಳೆದುಕೊಂಡವರಿಗೆ ಎಬಿಸಿ ಮಾದರಿಯಲ್ಲಿ ಕ್ರಮವಾಗಿ 5ಲಕ್ಷ, 3ಲಕ್ಷ ಮತ್ತು 50 ಸಾವಿರ ರೂಪಾಯಿ ಪರಿಹಾರ ನೀಡಲಾಗುತ್ತಿತ್ತು. ಮನೆಯಲ್ಲಿ ನೀರು ಬಂದವರಿಗೆ ವಿಶೇಷ ಪ್ಯಾಕೇಜ್ ಮೂಲಕ ಪರಿಹಾರ ನೀಡಲಾಗಿತ್ತು. ಆದರೆ, ಈಗೀನ ಸರಕಾರ ಎನ್‌ಡಿಆರ್‌ಎಫ್, ಸಿಆರ್‌ಎಫ್ ನೆಪದಲ್ಲಿ ಹಣ ಕೊಡುತ್ತಿದೆ. ಇದು ರೈತ ಕುಟುಂಬಗಳಿಗೆ ಸಮಸ್ಯೆಯನ್ನ ತಂದೊಡ್ಡಿದೆ ಎಂದು ಮಾಜಿ ಸಚಿವರು ಹೇಳಿದ್ದಾರೆ.

ಮಾಜಿಯಿದ್ದ ಸಮಯದಲ್ಲಿ ಓಡೋಡಿ ಪೋಟೊ ತೆಗೆಸಿಕೊಂಡು “ಅಲ್ಲಿ ಪರಿಹಾರ ಕೊಟ್ಟಿಲ್ಲ, ಇಲ್ಲಿ ಪರಿಹಾರ ಕೊಟ್ಟಿಲ್ಲ” ಎಂದು ಪೋಟೊ ತೆಗೆಸಿಕೊಳ್ಳುತ್ತಿದ್ದ ಹಾಲಿ ಶಾಸಕರಿಗೆ ಬೆಳೆ ಕಳೆದುಕೊಂಡವರು, ಮನೆ ಕಳೆದುಕೊಂಡವರು ಕಾಣದೇ ಇರುವುದು ಸೋಜಿಗ ಮೂಡಿಸುತ್ತಿದೆ ಎಂದು ಹೇಳಿದ್ದಾರೆ.

- Advertisement -
Ad image

ತಕ್ಷಣವೇ ರಾಜ್ಯ ಸರಕಾರ ನೊಂದ ರೈತರ ಬೆಳೆಗೆ ಸೂಕ್ತ ಪರಿಹಾರ ಘೋಷಣೆ ಮಾಡಬೇಕು. ಮನೆ ಬಿದ್ದವರಿಗೆ ಬಿಜೆಪಿ ಸರಕಾರ ಪರಿಹಾರ ನೀಡಿದ ಮಾದರಿಯಲ್ಲಿ ಒದಗಿಸಬೇಕೆಂದು ಮಾಜಿ ಸಚಿವ ಶಂಕರ ಪಾಟೀಲಮುನೇನಕೊಪ್ಪ ಒತ್ತಾಯಿಸಿದ್ದಾರೆ.

Share this Article