ಬೆಂಗಳೂರು : ಸ್ಯಾಂಡಲ್ವುಡ್ ನಟ ವಿಜಯರಾಘವೇಂದ್ರ ಪತ್ನಿ ಸ್ಪಂದನಾ ವಿಜಯರಾಘವೇಂದ್ರ ಅವರು ಹೃದಯಾಘಾತದಿಂಧ ನಿಧನರಾಗಿದ್ದಾರೆ. ಸ್ನೇಹಿತರು ಮತ್ತು ಕುಟುಂಬದವರ ಜೊತೆ ತೆರಳಿದ್ದಾಗ ಹಾರ್ಟ್ ಅಟ್ಯಾಕ್ ಆಗಿ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ. ಈ ಸುದ್ದಿ ಇಡೀ ಕನ್ನಡ ಚಿತ್ರರಂಗಕ್ಕೆ ಆಘಾತಕಾರಿ ಸುದ್ದಿಯಾಗಿದೆ. ದಂಪತಿಗೆ ಇವರಿಗೆ ಶೌರ್ಯ ಎಂಬ ಓರ್ವ ಪುತ್ರನಿದ್ದಾನೆ. 2016ರಲ್ಲಿ ಬಿಡುಗಡೆಯಾದ ಅಪೂರ್ವ ಸಿನೆಮಾದಲ್ಲಿ ಅತಿಥಿ ಪಾತ್ರದಲ್ಲಿ ಸ್ಪಂದನಾ ನಟಿಸಿದ್ದರು. ನಿವೃತ್ತ ಪೊಲೀಸ್ ಅಧಿಕಾರಿ ಶಿವರಾಂ ಅವರ ಪುತ್ರಿಯಾಗಿರುವ ಸ್ಪಂದನಾ ಅವರನ್ನು ವಿಜಯ ರಾಘವೇಂದ್ರ 2007, ಆಗಸ್ಟ್ 26 ರಲ್ಲಿ ಪ್ರೀತಿಸಿ ಮದುವೆಯಾಗಿದ್ದರು. ಇವರ 16ನೇ ವಿವಾಹ ವಾರ್ಷಿಕೋತ್ಸವಕ್ಕೆ ಕೇವಲ 19 ದಿನಗಳು ಬಾಕಿ ಇರುವಂತೆ ಈ ದುರಂತ ನಡೆದಿದೆ.
ಥೈಲ್ಯಾಂಡ್ ನಲ್ಲಿ ನಿನ್ನೆ ಸಂಜೆ ಶಾಪಿಂಗ್ ಮುಗಿಸಿ ರೂಂಗೆ ಬರುವಾಗ ಈ ಘಟನೆ ನಡೆದಿದೆ. ಹೃದಯಾಘಾತಕ್ಕೆ ಒಳಗಾಗಿದ್ದ ಸ್ಪಂದನಾರನ್ನು ಕೂಡಲೇ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಆಸ್ಪತ್ರೆಗೆ ಕರೆದೊಯ್ಯುವ ವೇಳೆ ಸಾವನ್ನಪ್ಪಿರುವುದಾಗಿ ವೈದ್ಯರು ಘೋಷಣೆ ಮಾಡಿದ್ದಾರೆ ಎಂದು ತಿಳಿದುಬಂದಿದೆ.
ನಾಳೆ ಬೆಂಗಳೂರಿಗೆ ಸ್ಪಂದನಾ ವಿಜಯರಾಘವೇಂದ್ರ ಅವರ ಪಾರ್ಥಿವ ಶರೀರವನ್ನು ಬೆಂಗಳೂರಿಗೆ ತರಲಾಗುತ್ತದೆ ಎಂದು ವಿಜಯರಾಘವೇಂದ್ರ ಅವರ ಕುಟುಂಬ ಮಾಹಿತಿ ನೀಡಿದೆ. ಮೂರು ದಿನಗಳ ಹಿಂದೆ ಸ್ಪಂದನಾ ಅವರು ಬ್ಯಾಂಕಾಕ್ ಗೆ ತೆರಳಿದ್ದರು. ನಿನ್ನೆ ಬ್ಯಾಂಕಾಕ್ ನಲ್ಲಿ ಹೃದಯಾಘಾತವಾಗಿ, ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ. ಲೋ ಬಿಪಿ ಹಾಗು ಹೃದಯಾಘಾತ ಆಗಿತ್ತು ಎನ್ನಲಾಗಿದೆ. ವಿಷಯ ತಿಳಿಯುತ್ತಿದ್ದಂತೆ ವಿಜಯರಾಘವೇಂದ್ರ ಕುಟುಂಬದವರು ಬ್ಯಾಂಕಾಕ್ ಗೆ ತೆರಳಿದ್ದಾರೆ.
