ಯಲ್ಲಾಪುರ : ಅಂಗನವಾಡಿ ಬಳಿ ಬೃಹತ್ ಆಲದ ಮರವೊಂದು ಮುರಿದುಬಿದ್ದಿದ್ದು, ಗರ್ಭಿಣಿ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಯಲ್ಲಾಪುರ ತಾಲೂಕಿನ ಕಿರವತ್ತಿಯಲ್ಲಿ ನಡೆದಿದೆ.ಮೃತಳನ್ನು ಸಾವಿತ್ರಿ ಬಾಬು ಖರಾತ್ (28) ಗುರುತಿಸಲಾಗಿದೆ. ಆಕೆ 5 ತಿಂಗಳ ಗರ್ಭಿಣಿ ಆಗಿದ್ದಳು. ಘಟನೆಯಲ್ಲಿ ಸ್ವಾತಿ ಬಾಬು ಖರಾತ್ (17), ಗಾಟು ಲಕ್ಕು ಕೊಕರೆ (5), ಶ್ರಾವಣಿ ಬಾಬು ಖರಾತ್ (2), ಶಾಂಭವಿ ಬಾಬು ಖರಾತ್ (4) ಗಂಭೀರವಾಗಿ ಗಾಯಗೊಂಡಿದ್ದಾರೆ. ಸಾನ್ವಿ ಬಾಬು ಕೊಕರೆ (5), ವಿನಯ ಲಕ್ಕು ಕೊಕರೆ (5) ಮತ್ತು ಅನುಶ್ರೀ ಮಾಂಬು ಕೊಕರೆ (5) ಸಣ್ಣಪುಟ್ಟ ಗಾಯಗಳಾಗಿದ್ದು, ಅಪಾಯದಿಂದ ಪಾರಾಗಿದ್ದಾರೆ. ಅಂಗನವಾಡಿಯಿಂದ ಮನೆಗೆ ಮರಳುತ್ತಿದ್ದ ವೇಳೆ ದಾರಿಯಲ್ಲಿದ್ದ ಆಲದ ಮರ ದಿಢೀರ್ ಮುರಿದುಬಿದ್ದಿದೆ. ಇದರಿಂದ ಈ ಅನಾಹುತ ನಡೆದಿದೆ. ಗಾಯಳುಗಳನ್ನು ಯಲ್ಲಾಪುರದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಗಂಭೀರ ಗಾಯಗೊಂಡವರನ್ನು ಹೆಚ್ಚಿನ ಚಿಕಿತ್ಸೆಗೆ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ರವಾನಿಸಲಾಗಿದೆ. ಯಲ್ಲಾಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
